Friday, November 14, 2008

ಕೋತಿಯ ಕಾಲಡಿ ನಿಂಬೆ.........

-ಜಯದೇವ ಪ್ರಸಾದ.



ಧಡೂತಿ ಆಸಾಮಿಯನ್ನು ಪರಿಚಯವಾಗಿದ್ದು ಹೀಗೆ:

ಹಾಸ್ಯ ಸಂಜೆ ಕಾರ್ಯಕ್ರಮ . ಕಿಕ್ಕಿರದ ಜನಸಂದಣಿ. ಆಸನಗಳೆಲ್ಲಾ ಭರ್ತಿಯಾಗಿದ್ದು ಇನ್ನೂ ಜನರು ಹಿಂಭಾಗದಲ್ಲಿ ನಿಂತಿದ್ದರು. "ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು" ಎಂಬ ಗಾದೆಮಾತು ನೆನಪಾಯಿತು. ಪರರ ಅಂಬರ ಪರಾಂಬರ- ಕರ್ಮಧಾರಯ ಸಮಾಸ !! ಪರಾಂಬರಿಸುವುದು ಎಂದರೆ ಬೇರೆಯವರ ಡ್ರೆಸ್ ಧರಿಸುವುದೇ ಸರಿ !! ಹಾಗೆಯೇ ಕೈಯಲ್ಲಿದ್ದ ಅಣ್ಣನ ಹಳೆಯ ಕೋಟನ್ನು ಧರಿಸಿ ಸರಿಯಾಗಿ ನೋಡಿದಾಗ ಸಭೆಯ ಮಧ್ಯ ಭಾಗದಲ್ಲಿ ಒಂದು ಕುರ್ಚಿ ಖಾಲಿ ಇರುವುದನ್ನು ಸಂಶೋಧಿಸಿ "ಜೈ ಗಾದೆಮಾತೇ !" ಎನ್ನುತ್ತಾ ಅಲ್ಲಿ ಹೋಗಿ ಕುಳಿತೆ.

ಒಬ್ಬರು ಸಾಹಿತಿ ಹಾಸ್ಯ ಭಾಷಣ ಮಾಡುತ್ತಿದ್ದರು, ಮೈಕಿನ ತೊಂದರೆಯಿಂದಾಗಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ’ಪರಾಂಬರಿಸಿಕೇಳುವ ಬಗ್ಗೆ ಯಾವುದೇ ಗಾದೆಯ ಮಾತನ್ನ ನಾನು ಇದುವರೆಗೆ ಕೇಳದಿದ್ದುದರಿಂದ ಅಲ್ಲದೆ ವಿಪರೀತ ಸೆಖೆಯಿಂದಾಗಿ ನನ್ನಣ್ಣನ ಹಳೆ ಕೋಟು ಕಳಚಿದೆ. ಸಭೆಯ ಮಧ್ಯಭಾಗದಲ್ಲೇ ಸರಿಯಾಗಿ ಕೇಳಿಸುವುದಿಲ್ಲವಾದ್ದರಿಂದ ಹಿಂಭಾಗದಲ್ಲಂತೂ ಏನೇನೂ ಕೇಳಿಸುತ್ತಿದ್ದಿರಲಾರದು. ಹಾಸ್ಯ ರಸಾಯನ ಹರಿದು ಬರುತ್ತಲೇ ಇತ್ತು ಹಾಗೂ ಸಭಿಕರು ನಗುತ್ತಲೇ ಇದ್ದರು. ಮುಂಭಾಗದ ಸಭಿಕರು ಸ್ವಲ್ಪ ಗಂಭೀರವಾಗಿ ಮುಗುಳು ನಗೆ ತೇಲಿಸುತ್ತಿದ್ದರೂ ಹಿಂಭಾಗದ ಜನರಂತೂ ಗಟ್ಟಿಯಾಗಿ ಸಶಬ್ದವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಕೇಕೆ ಹಾಕಿ ನಗುತ್ತಿದ್ದರು- ಸಂಧರ್ಭೋಚಿತವಾಗಿ. ಸಭೆಯಲ್ಲಿ ಕಳೆಗಟ್ಟಿತ್ತು. ಭಾಷಣಗಾರರು ಸಭೆಯ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿದ್ದರು. ಸಮಯಾವಧಾನದಿಂದ ಸ್ಥಳದಲ್ಲಿಯೇ ಹಾಸ್ಯದ ಮಾತುಗಳನ್ನು ಸೃಷ್ಟಿಸಿ ಹೇಳತೊಡಗಿದರು. ಇಡೀ ಸಭೆಯೇ ಹಾಸ್ಯ ಸಂಜೆಯ ಆನಂದ ಪಡೆಯುತ್ತಿತ್ತು. ಸಂದರ್ಭದಲ್ಲಿ ಸಭೆಯಲ್ಲಿ ಸುತ್ತಾಡುತ್ತಿದ್ದ ಸಂಘದ ಸಂಘಟಕರಾದವರು ಕೂಗಿ ಹೇಳಿದರು "ಮೈಕ್ ಸರಿಯಿಲ್ಲ; ಹಿಂಭಾಗದಲ್ಲಿ ಏನೇನೂ ಕೇಳಿಸುವುದೇ ಇಲ್ಲ !!" ಪಾಪ. ಭಾಷಣಗಾರರು ಕಕ್ಕಾಬಿಕ್ಕಿ !! ಹಿಂಭಾಗದಲ್ಲಿ ಕೇಳಿಸದಿದ್ದರೆ ಅಲ್ಲಿಯ ಸಭಿಕರು ಕೇಕೆ ಹಾಕಿ ನಕ್ಕಿದ್ದಾದರೂ ಹೇಗೆ ?? ನಗಿಸಲು ಬಂದವರ ಮುಖದಲ್ಲಿ ನಗೆ ಮಾಸಿ ಆಶ್ಚರ್ಯದ ಛಾಯೆ ಮೂಡತೊಡಗಿತು. ಹಾಸ್ಯದ ನಲ್ಲಿ ಮುನಿಸಿಪಾಲಿಟಿಯಾಯಿತು.

ಒಬ್ಬ ಧಡೂತಿ ವ್ಯಕ್ತಿ ನನ್ನಿಂದ ನಾಲ್ಕು ಸೀಟು ಆಚೆ ಕುಳಿತಿದ್ದರು. ಬಕ್ಕ ತಲೆ, ಉದ್ದ ಮೂಗು, ಗಜಕರ್ಣ, ತೊಂಡೇ ತುಟಿ; ತಿಂದದ್ದೆಲ್ಲಾ ಬಹಳ ಚೆನ್ನಾಗಿ ಮೈಗೂಡ್ಸಿಕೊಂಡಿದ್ದು "ಮಧ್ಯ ವಯಸ್ಸಿನ ರೇಖಾ"ಳನ್ನು ದಾಟಿದ ಅಸಾಮಿ ತನ್ನ ಒಂದು ಸೀಟಿನಲ್ಲಿ ಒಂದೂವರೆಯಾಗಿ ಕೂತು ಸಶಬ್ಧವಾಗಿ ತಾಳಬದ್ಧವಾಗಿ ದೇಹ ಕುಣಿಸುತ್ತಾ ಅಲ್ಲಲ್ಲಿ ಧಾರಾಳವಾಗಿ ತನ್ನದೇ ಆದ ವಿಲಕ್ಷಣ ಶೈಲಿಯಲ್ಲಿ ನಗುತ್ತಿದ್ದರು. ಅಲ್ಲಲ್ಲಿನಗೆಹನಿಗಳನ್ನು ಸಿಂಪಡಿಸುತ್ತಾ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ಹರಿಸುತ್ತಾ ಆಗಾಗ ಕಣ್ಣುಗಳನ್ನು ಕೈ ಬೆರಳುಗಳಲ್ಲಿ ಒತ್ತುತ್ತಾ ಜೋರಾಗಿ ಉಚ್ಚಸ್ಥಾಯಿಯಲ್ಲಿ ನಗುತ್ತಿದ್ದರು. ಆತನ ಸಂಪೂರ್ಣ ಜವಾಬ್ದಾರಿ ಹೊತ್ತ ಕುರ್ಚಿ ಕೂಡಾ ಪಕ್ಕ ವಾದ್ಯದಲ್ಲಿ ಸಹಕರಿಸುತ್ತಿತ್ತು.

ಅಲ್ಲದೆ, ಹಿಂಬದಿಯಲ್ಲಿ ಕುಳಿತಿದ್ದ ಇತರರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಭಾಷಣ ಸರಿಯಾಗಿ ಕೇಳಲ್ಪಡದ ಸಕಲರಿಗೂ ಮಾರ್ಗದರ್ಶಕರೂ ಆಗಿ ಕೆಲಸಮಾಡುತ್ತಿದ್ದರು. ಭಾಷಣಕಾರರ ಮಾತಿನಲ್ಲಿ, ಆಯಕಟ್ಟಿನ ಸ್ಥಳಗಳಲ್ಲಿ ಹಾಸ್ಯದ ಶಾಂಪೇನ್ಟಪ್ಎಂದು ಸಿಡಿದಾಗ ಸಾಮಿ ಅದನ್ನು ಗುರುತಿಸಿಗೊಳ್ಎಂದು ಮೈಕುಣಿಸಿ ನಗುವುದೇ ಹಿಂಭಾಗದಲ್ಲಿರುವವರಿಗೆ ಒಂದು ಸಿಗ್ನಲ್. ಸರಿಯಾಗಿ ಅದೇ ಸಂದರ್ಭವನ್ನು ನೋಡಿ ಹಿಂಭಾಗದ ಜನತೆ ಕೇಕೆ ಹಾಕಿ ನಗುತ್ತಿದ್ದರು- ಪಾಪ, ಭಾಷಣಕಾರರಿಗೆ ಬೇಸರವಾಗದಿರಲೆಂದು ! ದಕ್ಷಿಣ ಕನ್ನಡದ ಜನಾರೀ, ದಾಕ್ಷಿಣ್ಯ ಜಾಸ್ತಿ !!

ಭಾಷಣಕಾರರಿಂದ ಹಾಸ್ಯ ಧಡೂತಿಗೆ ಹಾಗೂ ಧಡೂತಿಯಿಂದ ಅದು ಕನ್ನಡದ ದಾಕ್ಷಿಣ್ಯಮೂರ್ತಿಗಳಿಗೆರಿಲೇಆಗುತ್ತಿತ್ತು. ಕಾಲ ಕ್ರಮೇಣ ನಾನೂ ಇತರರಂತೆ ಧಡೂತಿಯನ್ನೇ ಗಮನಿಸತೊಡಗಿದೆ. ದಿನದ ಆಯಾಸ ಬಳಲುವಿಕೆ ಮರೆಯಾಗಿ ಅದೇ ಒಂದು ಮೋಜೆನಿಸಿತು. ಅವರು ಸಿಗ್ನಲ್ ಕೊಟ್ಟಕ್ಷಣ ಇತರರಂತೆ ಯಾವುದೇ ಹಿಂಜರಿಕೆಯಿಲ್ಲದೆ ಮನಃಪೂರ್ವಕ ನಗಲು ಆರಂಭಿಸಿದೆ. ಅಕ್ಕಪಕ್ಕದವರೆಲ್ಲರೂ ಇದನ್ನೇ ಒಂದು ಆಟವಾಗಿಸಿ ಹಾಸ್ಯ ಸಂಜೆಯ ಮಜ ಹೀರುತ್ತಿದ್ದರು.

ಅಬ್ಬಬ್ಬ !! ಮುಗಿಯಿತು, ಪರಿಚಯಿಸುವ ಕಾರ್ಯ. ಯಾಕೆಂದರೆ, ಇಂತಹ ಘಟಾನುಘಟಿಗಳನ್ನು ಪರಿಚಯಿಸುವುದು ಒಂದು ಸುಲಭದ ಕೆಲಸವಲ್ಲ. ನಂಗಂತೂ ಟೆಂಶನ್ ! ಇವರ ಹೆಸರು-ಕುಲ-ಗೋತ್ರ ನಾನು ಹೇಳೇ ಇಲ್ಲ. ಯಾಕಂದ್ರೆ, ನನಗೂ ಗೊತ್ತಿಲ್ಲ. ನಾನು ಈಗಷ್ಟೇ ಅವರನ್ನು ಕಂಡಿದ್ದು. ಅಷ್ಟರಲ್ಲೇ ಇಷ್ಟವಾದರು.

ಮುಂದಿನ ಕೆಲವು ಸಮಾರಂಭಗಳಲ್ಲೂ ಅವರನ್ನು ಕಂಡೆ. ತಮ್ಮದೇ ವಿಲಕ್ಷಣ ಶೈಲಿಯಲ್ಲಿ ನೆರೆದ ಜನತೆಗೆ ನಗು ಬರುವಂತೆ ನಡೆದಾಡುತ್ತಿದ್ದರು. ಪಕ್ಕಾ ಹಾಸ್ಯ ಸ್ವಭಾವವಲ್ಲದೆ ಅಕ್ಕ ಪಕ್ಕದವರಲ್ಲಿ ಆತ್ಮೀಯವಾಗಿ ನಗುತ್ತಾ ಮಾತನಾಡಿಸುತ್ತಾ ಇರುತ್ತಿದ್ದರು. ನಾನು ದೂರದಿಂದ ಅವರನ್ನು ಗಮನಿಸುತ್ತಿದ್ದರೂ ಹೆಚ್ಚು ಮಾತನಾಡಿ ಪರಿಚಯಿಸಿಕೊಳ್ಳಲು ಸಂದರ್ಭವಾಗಿರಲಿಲ್ಲ.

ಒಂದು ಶನಿವಾರ ಊರಿಗೆ ಬಂದವನೇ ಸಂಜೆ ಪೇಟೆಗೆ ಹೊರಟೆ ತರಕಾರಿ ಖರೀದಿಗೆ. ಊರಿನ ಮುಖ್ಯ ತರಕಾರಿ ಮಾರುಕಟ್ಟೆ ಇರುವುದು ಬಸ್ ಸ್ಟಾಂಡಿನ ಪಕ್ಕದಲ್ಲಿ. ಅಂಗಡಿ ಸುತ್ತಾಡುತ್ತಾ ತರಕಾರಿಗಳ ಗುಣಮಟ್ಟ ನೋಡುತ್ತಾ ಬೆಲೆ ಕೇಳುತ್ತಾ ಟೊಮಾಟೋ ಬೆಲೆ ಕೇಳಿದಾಗ ಗೊತ್ತಾಯಿತು, ನನ್ನ ಕಾರ್ಡಿಯಾಲಜಿಸ್ಟ್ ಇದೊಂದು ಸಲಹೆ ನೀಡಲೇ ಇಲ್ವಲ್ಲ !!- ಹತ್ತು ಹಲವು ಮಾಡಬಾರದ ಸಲಹೆಗಳ ಪಟ್ಟಿಯಲ್ಲಿ "ಮಾರ್ಕೆಟ್ನಲ್ಲಿ ಟೊಮಾಟೋ ಬೆಲೆ ಕೇಳಬಾರದು" ಎಂದು ಹೇಳಲೇ ಇಲ್ಲ. ಬಗ್ಗೆ ಅವರಿಗೆ ಹೇಳಬೇಕು ಎಂದು ಅಲೋಚಿಸುತ್ತಾ ನಿಂತಿದ್ದೆ. ಆಗಲೇ ನನ್ನ ಪ್ಯಾಂಟಿಗೆ ರಾಚಿತು ಒಂದು ಕೊಳೆತ ಲಿಂಬೇ ಹುಳಿ. ಪ್ಯಾಂಟಿಗೆ ತಗಲಿತು ಕೊಳಕು. ಲಿಂಬೇಹುಳಿ ಮೇಲೆ ಕನ್ಸ್ಯೂಮರ್ ಹಾಕುವಷ್ಟು ಕೋಪ ಏರಿತು. ನನ್ನ ಕರ್ಮ !!

ಈಗ ಅದರ ಕರ್ತೃವಿನ ದರ್ಶನ:

ಒಂದೂವರೆ ಸೈಜಿನ ದಢೂತಿ ಎದುರಿಗೆ ನಿಂತು "ಸಾರಿ..... ಸಾರಿ" ಎಂದು ಪೆಚ್ಚು ನಗೆ ಬೆಳಗುತ್ತಿದ್ದರು. ಕೂಡಲೇ ನೆನಪಾಯಿತು- ಸಭೆಗಳಲ್ಲಿ ನೋಡಿದ ವ್ಯಕ್ತಿ ಇವರೇ.

" ಸಾರಿ.....ವೆರಿ ವೆರಿ ಸಾರಿ. ನಾ ನೋಡಲಿಲ್ಲ. ಲಿಂಬೆ ಹುಳಿ ಕಾಲಡಿ ಸಿಕ್ಕು ನಿಮ್ಮ ಪ್ಯಾಂಟು ಮೇಲೆ ಬಿತ್ತು. ಯ್ಯಾಮ್ ರಿಯಲ್ಲಿ ಸೋರಿ." ಎಂದು ಪಶ್ತಾತ್ತಾಪ ಸೂಚಿಸಿದರು.

" ಇಟ್ ಈಸ್ ಓಕೆ....ತೊಂದ್ರೆ ಇಲ್ಲ" ಎಂದೆ. ಇನ್ನೆಷ್ಟು ಸೋರಿದರೇನು ಫಲ ?

" ನಿಮ್ಮನ್ನು ನಾ ನೋಡಿದ್ದೇನೆ.... ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ.." ಅವರ ಅಂದಿನ ಹಾವ-ಭಾವ ನೆನಪಾಗುತ್ತಲೇ ನಗು ಉಮ್ಮಳಿಸಿತು.

"ಹೌದಾ. ಸಂತೋಷ. ನಾನು "ತಿರುಮಲೇಶ್ ಕೋವಳ್ಳಿ, - ಟಿ.ಕೆ ಇನ್ ಶಾರ್ಟ್" ಎಂದು ನಗೆ ಬೀರಿದ ಲಿಂಬೇ ಗೌಡ !

ಟಿ.ಕೆ ಉಲ್ಟಾ ಮಾಡಿದ್ರೆ ಪಕ್ಕಾ ಕೋ. ತಿ ಆಗ್ತಾನಲ್ಲಾ ಅಂತ ನೆನೆದುಕೊಳ್ಳುತ್ತಾ ನನ್ನ ಪ್ಯಾಂಟನ್ನು ಇನ್ನೊಮ್ಮೆ ಬಗ್ಗಿ ಕೊಡವಿಕೊಂಡು ಪೆಚ್ಚು ಪೆಚ್ಚಾಗಿ ನಕ್ಕೆ. ನಗುವಾಗ ಕೋತಿ ಮುಖ ನೋಡಬಾರದೆಂಬ ಸಾಮಾನ್ಯ ಜ್ಞಾನವನ್ನಂತೂ ಪ್ರೈಮರಿ ಸ್ಕೂಲ್ ಮೇಷ್ಟ್ರು ದಂಡರೂಪೇಣ ನನಗೆ ಶತಸ್ಸಿದ್ಧ ಮಾಡಿದ್ದರು. ಎಲ್ಲಾದರು ಕ್ಲಾಸಿನಲ್ಲಿ ನಕ್ಕರೆ " ನನ್ನ ಮುಖಾದಲ್ಲಿ ಏನು ಕೋತಿ ಕುಣಿತದಾ..." ಎಂದು ಬಾರು ಕೋಲಿನಲ್ಲಿ ಬರೋಬ್ಬರ್ ಬಾರಿಸುತ್ತಿದ್ದರು. ಆವಾಗಲೇ ನಾನು ಮನಸ್ಸಿನಲ್ಲೇ ಒಂದು ದೊಡ್ಡ ಪೋಸ್ಟರ್ ಹಾಕಿ ಬಿಟ್ಟಿದ್ದೆ..... ಏನ್ ನೋಡಿ ಬೇಕಾದ್ರೂ ನಗ್ ಬೌದು...., ಹುಡ್ಗಿ ಮುಖಾ ನೋಡಿ ಬೇಕಿದ್ರೂ ನಗ್ ಬೌದು, ಪ್ರಿನ್ಸಿಪಾಲ್ ಮುಖಾ ನೋಡಿ ಬೇಕಿದ್ರೂ ನಗ್ ಬೌದು. ಆದ್ರೆ, ಏಳೇಳು ಜನ್ಮಕ್ಕೂ ಕೋತಿ ಮುಖಾ ಮಾತ್ರ ನೋಡಿ ನಗ್ ಬಾರ್ದು ಅಂತ.

ಅಂತೂ ಶನಿವಾರ ಸಂಜೆ, ಕೋವಳ್ಳಿ ತಿರುಮಲೇಶ್ ಅರ್ಥಾತ್ ಕೋ.ತಿ ದರ್ಶನ ಆಯಿತು. " ಜಯದೇವ್...." ಎಂದು ಹೇಳಿ ಕೈ ಕುಲುಕಿದೆ.

"ಬನ್ನಿ ನನ್ ಮನೆ ಇಲ್ಲೇ ಹತ್ರ. ಸ್ವಲ್ಪ ಪ್ಯಾಂಟ್ ತೊಳ್ಕೊಂಡು, ಕಾಫ಼ಿ ಕುಡ್ಕೊಂಡು ಹೋಗ್ ಬೌದು." ಎಂದು ನನ್ನ ಉತ್ತರಕ್ಕೂ ಕಾಯದೆ ನನ್ನ ತೋಳನ್ನು ಗಟ್ಟಿಯಾಗಿ ಹಿಡ್ಕೊಂಡು ಅಲ್ಮೋಸ್ಟ್ ಎಳೆದ್ಕೊಂಡೇ ಹೋದರು.

ಕಪಿಮುಷ್ಟಿಯ ಬಗ್ಗೆ ಕೇಳಿದ್ದೆ. ಆದ್ರೆ ಈಗ ಕಪಿ ತೋಳನನ್ನು ಹೇಗೆ ಹಿಡಿಯುತ್ತೆ ಎಂಬ "ಫ಼ಸ್ಟ್ ಹ್ಯಾಂಡ್" ಅನುಭವ ಆಗ ತೊಡಗಿತು. ಇನ್ನು ದಢೂತಿ ನನ್ನ ಸೆಕೆಂಡ್ ಹ್ಯಾಂಡನ್ನೂ ಹಿಡ್ಕೊಂಡ್ರೆ ಎಂಬ ಪ್ರಾಣ ಭಯ ಈವರೆಗೆ ಆವರಿಸಿದ್ದ ಕೊಳೆತ ಲಿಂಬೂ ಸ್ಪ್ರೇ ಗಿಂತ ಹೆಚ್ಚಾಗಿ ಕಾಡತೊಡಗಿತು. ನಶ್ವರ ಜೀವನದಲ್ಲಿ ಎಲ್ಲವೂ ಸಾಪೇಕ್ಷ ಎಂಬ ಸಂತವಾಣಿಗೆ ಒಂದು ಡೆಮೋ ತೋರಿದಂತಾಯ್ತು.!

ಅಲ್ಲೇ ಹಿಂಬದಿ ಓಣಿಯಲ್ಲಿ ಚೂರೇ ದೂರ ನನ್ನ ತೋಳನ್ನು (ನನ್ನ ಸಹಿತ) ಎಳೆದುಕೊಂಡು ಸೀದಾ ಅವರ ಮನೆ ಹೊಕ್ಕರು.ಇಬ್ಬರೂ ನಗುತ್ತಲೇ ಇದ್ದೆವು.

ಸಣ್ಣ ಮನೆ ಆದರೆ ಚೊಕ್ಕ. ಎದುರಿನ ಡ್ರಾಯಿಂಗ್ ರೂಮುನಲ್ಲಿ ಟಿ. ವಿ, ಸೋಫ಼ಾ ಎಲ್ಲಾ ಇತ್ತು. ನನ್ನನ್ನು ಕುಳ್ಳಿರಿಸಿ ತಾವೂ ಆಸೀನರಾದರು ನನ್ನೆದುರು. ನಾವು ಮನೆ ಹೊಕ್ಕಾಗ ಅಲ್ಲಿ ವ್ಹೀಲ್ ಚೈರ್ ನಲ್ಲಿ ಕುಳಿತಿದ್ದ ಶೂನ್ಯಭಾವದ ಮಧ್ಯಮ ವಯಸ್ಸಿನ ಹೆಂಗಸೊಬ್ಬರು ಕುರ್ಸಿ ತಳ್ಳಿಕೊಂಡು ಒಳಗೆ ಕಣ್ಮರೆಯಾದರು.

" ನನ್ನ ಹೆಂಡ್ತಿ..... ಆಕ್ಸಿಡೆಂಟ್.., ಹದಿನೈದು ವರ್ಷಗಳಾಯಿತು." ಎಂದರು.

ನನ್ನ ನಗು ನಿಂತಿತು. " ....." ಅಂದೆ ಬೇಸರದಿಂದ. ’ಎಷ್ಟು ಕಠೋರ ಭಗವಂತ. ಎಷ್ಟು ನಿಷ್ಕಲ್ಮಶ ಮನಸ್ಸಿನ ವ್ಯಕ್ತಿಗೆ ಹೀಗೆ..!!!’ ಅಂದುಕೊಂಡೆ.

"ಏಷ್ಟು ಗಮ್ಮತಲ್ಲವಾ ಅವತ್ತಿನ ಫ಼ಂಕ್ಷನ್ನು. ನನಗಂತೂ ನಕ್ಕು ನಕ್ಕು ಹುಣ್ಣು ಹೊಟ್ಟೆಯಾಯಿತು" ಎಂದು ಇನ್ನೊಮ್ಮೆ ಮೈಕುಲುಕುತ್ತಾ ಜೋರಾಗಿ ನಕ್ಕರು ವಿಷಯ ಬದಲಿಸುತ್ತಾ. ಅದೇ ಶೈಲಿ, ಅದೇ ದೇಹ, ಅದೇ ಭಾವ....ಆದರಿಲ್ಲಿ ಬಾಗಿಲ ಪರದೆ ಇನ್ನೂ ಲಾಸ್ಯವಾಡುತ್ತಿತ್ತು ಹಿನ್ನೆಲೆಯಲ್ಲಿ. ಎನೋ ಬೇಸರವಾಯಿತು. ನಾನೆಣಿಸಿದಂತಿಲ್ಲವಲ್ಲ ಎಂಬ ಕಳವಳ ಮನಸ್ಸಿನಲ್ಲಿ ಮೂಡಿತು. ಅಲ್ಲೇ ಸೋಫ಼ಾದಲ್ಲಿ ಕುಳಿತೆ.

"ನಾನು, ಅವಳು, ಮಗ, ಸೊಸೆ ಹಾಗೂ ಒಬ್ಬ ಮೊಮ್ಮಗ.... ಮಗ-ಸೊಸೆ ಇಬ್ಬರೂ ಲೆಕ್ಚರರ್ಸ್. ಮೊಮ್ಮಗನಿಗೆ ಒಂದು ವರ್ಷ. ನಾನು ಬ್ಯಾಂಕಿಂದ ಕೆ.ಆರ್.ಎಸ್ ತಗೊಂಡು ವರ್ಷ ಆಯ್ತು. ಈಗ ಆರಾಮದ ಜೀವನ." ಎಂದು ಪುನಃ ಜೋರಾಗಿ ನಗತೊಡಗಿದರು.

ನಾನು ಕೆ.ಆರ್.ಎಸ್ ಬಗ್ಗೆ ಯೋಚಿಸುತ್ತಾ ಪ್ರಯತ್ನಪೂರ್ವಕವಾಗಿ ಅವರ ನಗೆಗೆ ನಗೆ ಜೋಡಿಸುತ್ತಿದ್ದಂತೆ ಒಳಗಿನಿಂದ ಬಳೆಗಳ ಸದ್ದು ಕೇಳಿಸಿ ಪರದೆ ಸರಿಸಿ- ಅವರ ಸೊಸೆಯಿರಬಹುದು- ಹೊರಬಂದಳು. "ತಂದ್ರಾ, ಕೊತ್ತಂಬ್ರಿ ಸೊಪ್ಪು? " ಅವಳ ಸ್ವರದಲ್ಲಿ ಅಸಹನೆಯನ್ನು ಅಡಗಿಸುವ ಪ್ರಯತ್ನ ಕಾಣಲಿಲ್ಲ. ನಮ್ಮ ನಗೆಯ ಬಗ್ಗೆ ತಿರಸ್ಕಾರದ ಭಾವ ಇದ್ದ ಹಾಗಿತ್ತು. ನನ್ನ ಕಡೆಗೆ ಒಮ್ಮೆ ಕಣ್ಣು ಹಾಯಿಸಿ ಗಂಭೀರವಾಗಿ ತಿರುಮಲೇಶ್ ಕಡೆ ಮತ್ತೆ ದೃಷ್ಟಿ ನೆಟ್ಟಳು.

ತಿರುಮಲೇಶ್ ಚುರುಕಾದರು. ಸೊಪ್ಪಿಗಾಗಿ ಸೊಸೆ ಕಾಯುತ್ತಿದ್ದಂತಿತ್ತು. " ಇಲ್ಲ, ಅದು, ನಾನು .... ಇವರ ಪ್ಯಾಂಟಿಗೆ......" ಎಂದು ವಿಷಯ ತಿಳಿಸಲು ಆರಂಭಿಸುತ್ತಿದ್ದಂತೆಯೇ ಪರದೆಯಿಂದ ಕೈ ಒಳಕ್ಕೆ ಎಳೆದುಕೊಂಡಿತು. ಗಂಭೀರವದನೆ ಇನ್ನಷ್ಟು ಗಂಭೀರವಾಗಿ ಅದೃಷ್ಯವಾದಳು. ನಾನು ಅವಳೆಡೆ ನಕ್ಕು ಹಲೋ ಅನ್ನ ಬೇಕೆಂದು ಮಾಡಲಾರಂಭಿಸಿದ ಪ್ರಯತ್ನವನ್ನು ಅಲ್ಲೇ ಕೈಬಿಟ್ಟೆ.

ಹಾಸ್ಯದ ನಶೆ ಇಳಿಯಿತು. ಮನಸ್ಸು ಭಾರವಾಯಿತು, ಗಂಭೀರವಾಗಿ ಯೋಚಿಸತೊಡಗಿತು.
ಕೋ.ತಿ ಮಾತ್ರ ತನ್ನ ಮಾತನ್ನು ಮುಂದುವರಿಸುತ್ತಲೇ "ಪ್ಯಾಂಟು ಬೇಕಾದ್ರೆ ತೊಳೆದುಕೊಳ್ಳಿ ಸ್ವಲ್ಪ..."ಎಂದೆಲ್ಲ ಉಪಚರಿಸಿದರು. ನಾನು ಬೇಡ ಅಂದೆ. ನನ್ನ ಬಗ್ಗೆ ಕೇಳಲಾರಂಭಿಸಿದರು. "ನಾನೊಬ್ಬ ಇಂಜಿನಿಯರ್.." ಅಂದೆ.

" ಗೀತಾ, ಎರಡು ಕಾಫ಼ಿ ತರ್ತೀಯಾ.." ಎಂದು ಒಳಕ್ಕೆ ಸಂದೇಶ ರವಾನಿಸಿದರು. ಓಳಗಿಂದ ಏನೂ ಉತ್ತರ ಬಾರದಿರುವುದರಿಂದ ನನಗಾದ ಮುಜುಗರಕ್ಕೆ " ಛೇ ಛೇ ಕಾಫ಼ಿ ಯಾಕೆ ಬೇಡ. ನಾನು ಹೋಗ್ತೇನೆ. ಅರ್ಜೆಂಟ್ ಇದೆ" ಎಂದು ಏಳಲು ಹೊರಟೆ.

" ಇರಿ ಜಯದೇವ್. ಎಲ್ಲಿಗೆ ಹೋಗ್ತೀರಾ...ನೀವಲ್ಲದೆ ಬೇರೆ ಯಾರಾದರು ಆಗಿದ್ರೆ ಇವತ್ತು ನನ್ನನ್ನು ಒಂದು ಕ್ವಿಂಟಾಲ್ ಕೊಳೆತ ನಿಂಬೆಯಲ್ಲಿ ಶರ್ಬತ್ ಮಾಡಿ ಅದರಲ್ಲಿ ಮೂರು ಸಾರಿ ಮುಳುಗಿಸಿ ಎರಡೇ ಎರಡು ಬಾರಿ ಎತ್ತುತಿದ್ರು" ಇನ್ನೊಮ್ಮೆ ಗಹ ಗಹಿಸಿ ನಗತೊಡಗಿದರು ಕೋ.ತಿ. "ನೀವ್ ಆದ ಕಾರಣ ನಾನಿನ್ನೂ ಕೆಲವು ವರುಷ ಭೂಮಿಯಲ್ಲಿ ನಿಂಬೆ.......... ಎಂದು ಜೋರಾಗಿ ನಗತೊಡಗಿದರು. ನಾನು ಅಶ್ಚರ್ಯದಿಂದ ನಗುತ್ತಾ ಅವರನ್ನು ನೋಡುತ್ತಿರುವಂತೆಯೇ..,

ನನ್ ಕಾಲಡಿ ನಿಂಬೆ
ನಿಂ ಪ್ಯಾಂಟಿನಿಂ
ಬೆರೆದು; ನೀವ್
ಆಗಿರ್ದದರಿಂ
ನಾನಿಲ್ಲಿ ನಿಂಬೆ...........

ಎಂದು ಎನೇನೋ ಚುಟುಕ ಸೃಷ್ಟಿಕ್ರಿಯೆಯಲ್ಲಿ ಪದಗಳನ್ನು ಪೋಣಿಸತೊಡಗಿದರು. ಎನೂ ತೋಚದೆ ನಾನು ಸುಮ್ಮನೇ ಕುಳಿದಿದ್ದೆ. ಅಷ್ಟರಲ್ಲಿ ಕಾಫ಼ಿ ಬಂದೇ ಬಂದಿತು.. ಆದರೆ ಒಂದೇ ಗ್ಲಾಸ್ ! ನನ್ನ ಎದುರಿಗಿಟ್ಟು ಸೊಸೆ ಪರದೆಯೊಳಗೆ ಪುನಃ ಅದೃಶ್ಯಳಾದಳು.

ಕೋ. ತಿ ಮನೆಯ ದೃಶ್ಯಗಳು ಈಗ ಸ್ಪಷ್ಟವಾಗಿ ತೋರತೊಡಗಿತು. ಆದಷ್ಟು ಬೇಗ ಕಾಫ಼ಿ ಹೀರಿ ಅಲ್ಲಿಂದ ಹೊರಡುವ ಕಾಯಕದಲ್ಲಿ ತೊಡಗಿಸಿಕೊಂಡೆ. ಕೋ. ತಿ ಮಾತ್ರ ಇದೆಲ್ಲದರ ಪರಿವೆಯೇ ಇಲ್ಲದಂತೆ ಚುಟುಕವನ್ನು ಪರಿಷ್ಕರಿಸುವ ಕ್ರಿಯೆಯಲ್ಲಿ ತಲ್ಲೀನರಾಗಿದ್ದಂತೆ ಕಂಡಿತು. "ಪ್ಯಾಂಟಿನಿಂ ಬೆರೆದ" ಎಂಬಲ್ಲಿ ತೃಪ್ತಿ ಕಾಣದೆ ಅಲ್ಲೇ ಕಸರತ್ತು ನಡೆಸುವುದನ್ನು ಕಂಡು ವಿಸ್ಮಯಗೊಂಡೆ. ಬರೇ ಒಂದು ನಿಂಬೆ ಎಂಬ ಶಬ್ದದಲ್ಲಿ ಇಡೀ ಜಗತ್ತಿನ ಸಮಸ್ಯೆಗಳೆಲ್ಲವೂ ಅಡಗಿದೆಯೋ ಎಂಬಂತೆ ಹೆಣಗಾಡುವ ಒಂದು ಸರಳ ಜೀವನದೃಷ್ಟಿಯನ್ನು ಕಂಡು ಅಶ್ಚರ್ಯಗೊಂಡೆ.

"ಸಿಕ್ತು.., ಸಿಕ್ತು...ಪ್ಯಾಂಟಿನಲಿಂ ಬೆರೆದು....ಅಂದ್ರೆ ಹೇಗೆ? ಅದ್ರಲ್ಲೂ ಲಿಂಬೆ ಬರುತ್ತಲ್ಲ? " ಎಂದು ಗಹ ಗಹಿಸಿ ನಗತೊಡಗಿದರು.

ಬಾರದ ನಗುವನ್ನು ನಕ್ಕೆ; ಹಾಗೆ ನಕ್ಕಾಗ ಕಣ್ಣಲ್ಲಿ ಬಂದ ನೀರನ್ನೊರಸಿಕೊಂಡೆ.


PUBLISHED IN 'LOKADARSHANA' DEEPAVALI VISHESHANKA, NOVEMBER, 2008

No comments:

Post a Comment