Sunday, August 23, 2009

ಏನಿದು ಕ.ಎ.ಓ ಜೀನ್ ??


ಏನಿದು, C.E.O ಜೀನ್ ??


ಟಿ.ವಿ, ಪತ್ರಿಕೆಗಳಲ್ಲೆಲ್ಲಾ ಸಾವಿರಾರು ಕೋಟಿ ಬಿಸಿನೆಸ್ ಮಾಡುವ ಉದ್ಯಮಪತಿಗಳನ್ನು ಕಾಣುತ್ತೇವೆ. ಐ.ಐ.ಎಂ ಸುಶಿಕ್ಷಿತ ಕಾರ್ಪೋರೇಟ್ C.E.O ಗಳನ್ನು ನೋಡುತ್ತೇವೆ. ಚಿಕ್ಕ ಪ್ರಾಯದಲ್ಲೇ ಕೋಟಿ ಕೋಟಿಯಲ್ಲಿ ವ್ಯವಹಾರ ನಡೆಸುವ ಕೋರ್ಪೋರೇಟ್ ನಮೂನೆಯ ಹುಡುಗ ಹುಡುಗಿಯರನ್ನು ಕಂಡು ಅಚ್ಚರಿ ಪಡುತ್ತೇವೆ. ಒಬ್ಬ ರತನ್ ಟಾಟಾ, ಒಬ್ಬ ನಾರಾಯಣ ಮೂರ್ತಿ ಇಲ್ಲವೇ ಚಂದಾ ಕೊಚ್ಚರ್ ಹೇಗೆ ಉಂಟಾಗುತ್ತಾರೆ. ಒಬ್ಬ ಅಂಬಾನಿ ಇತರರಿಗಿಂತ ಹೇಗೆ ಭಿನ್ನ? ನಾವೂ ಯಾಕೆ ಹಾಗಾಗಬಾರದು? ಅಥವಾ ನಮ್ಮ ಮಕ್ಕಳು ಹಾಗಾಗಬೇಕಾದರೆ ಏನು ಮಾಡಬೇಕು? - ಸಹಜವಾಗಿ ಕಾಡುವ ಪ್ರಶ್ನೆಗಳು. ಒಬ್ಬ ವಿಜಯಶಾಲಿ C.E.O ನ ಲಕ್ಷಣಗಳಾವುವು? ಮುಖ್ಯವಾಗಿ C.E.O ಎಂಬ ಒಂದು ‘ಜೀನ್’ ಇದೆಯೇ?
ಹಿಂದುಸ್ತಾನ್ ಲಿವರ್‌ನ ಎಂಭತ್ತರ ದಶಕದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿದ್ದ ಶುನು ಸೇನ್ ಪಟ ಪಟನೆ ಅರಳು ಹುರಿದಂತೆ ಮಾತನಾಡುತ್ತಿದ್ದರು. ಅಂಕಿ ಅಂಶಗಳನ್ನ ಲೀಲಾಜಾಲವಾಗಿ ಸ್ಮರಣಶಕ್ತಿಯ ಆಧಾರದಿಂದ ಖೋಟ್ ಮಾಡುತ್ತಿದ್ದರು. ದೇಶದ ಯಾವ ಮೂಲೆಯಲ್ಲಿ ಯಾವ ಬ್ರಾಂಡ್‌ನ ಸೋಪ್ ಎಷ್ಟು ಬಿಕರಿಯಾಗುತ್ತದೆ, ಎದುರಾಳಿಗಳ ಬ್ರಾಂಡ್ ಎಷ್ಟು ಬಿಕರಿಯಾಗುತ್ತದೆ ಎಂದು ನಿಖರವಾಗಿ ಹೇಳಬಲ್ಲವರಾಗಿದ್ದರು. ಯಾವುದೇ ಮಾಹಿತಿ/ವಿವರಗಳನ್ನು ಯಥಾವತ್ತಾಗಿ ಹೇಳುತ್ತಿದ್ದರು. ನೂರಾರು ಪುಟಗಳ ಯಾವುದೇ ರಿಪೋರ್ಟನ್ನು ಕೂಡಾ ಬರೇ ಕಣ್ಣು ಹಾಯಿಸಿ ಅದರಲ್ಲಿರುವ ಮಾಹಿತಿಯನ್ನು ಹೀರುತ್ತಿದ್ದರು. ಯಾವ ಯಾವುದೋ ಸ್ಥಳಗಳಲ್ಲಿ, ಕಾಲಗಳಲ್ಲಿ ನೋಡಿದ, ನಡೆದ ಘಟನೆಗಳನ್ನು ಕೂಡಲೇ ರಿಕಾಲ್ ಮಾಡಿ ಒಂದಕ್ಕೊಂದು ತಾಳೆ ಹಾಕುತ್ತಿದ್ದರು. ಅಂದೆಲ್ಲಾ ನಾವುಗಳು ಅವರ ಛೇಂಬರ್ ಒಳಗೆ ಹೋಗಬೇಕಾದರೆ ಸ್ಪೆಶಲ್ ತಯಾರಿ ನಡೆಸಿಯೇ ಹೋಗ ಬೇಕಾಗಿತ್ತು. ಎಲ್ಲಾದರೂ ಒಂದು ಅಂಕಿ ತಪ್ಪು ಹೇಳಿದರೂ ಅಲ್ಲೇ ಹಿಡಿಯುತ್ತಿದ್ದರು. ಯಾವಾಗಲಾದರೂ ಒಂದು ಬಾರಿ ಕೇಳಿದ, ನೋಡಿದ ಅಥವಾ ಓದಿದ ವಿಷಯ ಅಲ್ಲೇ ಮೆದುಳಲ್ಲಿ ಅಚ್ಚಾಗುತ್ತಿತ್ತು ಮತ್ತು ಬೇಕಾದಾಗ ಪಟ್ ಅಂತ ಹೊರಬರುತ್ತಿತ್ತು. ಸ್ಮರಣ ಶಕ್ತಿ ಕೂಡಾ ಇಂಟೆಲಿಜೆನ್ಸ್‌ನ ಒಂದು ಪ್ರಕಾರ. ಮತ್ತು ಅತಿ ಮುಖ್ಯದ್ದು. ಕ್ಲಪ್ತ ಸಮಯಕ್ಕೆ ಅಗತ್ಯವಿರುವ ಮಾಹಿತಿ ನೆನಪಿಗೆ ಬಂದಾಗ ಮಾತ್ರ ವಿಷಯವನ್ನು ಸರಿಯಾಗಿ ವಿಶ್ಲೇಶಿಸಿ ಸರಿಯಾದ ನಿರ್ಧಾರಕ್ಕೆ ಬರಬಹುದು. ಬಿಸಿನೆಸ್ ನಲ್ಲಿ ಸರಿಯಾದ ಮಾಹಿತಿ ಸಮಯಕ್ಕೆ ಸರಿಯಾಗಿ ಸಿಗದಿದ್ದರೆ ನಿರ್ಧಾರಕ್ಕೆ ಕೂಡಾ ಸತ್ವವಿರುವುದಿಲ್ಲ.
ಲೋಜಿಕ್, ಅಥವಾ ತರ್ಕಶಾಸ್ತ್ರ. ನಾವು ಯಾವುದನ್ನ ಬಹುತೇಕ ಇಂಟೆಲಿಜೆನ್ಸ್ ಎಂದು ಕರೆಯುತ್ತೇವೋ ಅದು ಬಿಸಿನೆಸ್‌ನಲ್ಲಿ ತರ್ಕಶಾಸ್ತ್ರದ ರೂಪದಲ್ಲಿ ಅಗತ್ಯ ಬರುತ್ತದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ಼್ ಮ್ಯಾನೇಜ್ಮೆಂಟಿನಲ್ಲಿ ಎರಡೂ ವರ್ಷ ಕೇಸ್ ಸ್ಟಡಿ ಮೂಲಕ ಹಗಲೂ ರಾತ್ರಿ ವಿಧ್ಯಾರ್ಥಿಗಳನ್ನು ಕೊರೆಯುವುದು ಲಾಜಿಕ್ ಎಂಬ ಸೂತ್ರವನ್ನು ಹಿಡಿದೇ. ಪ್ರತಿಯೊಂದು ವಾದ, ಪ್ರತಿಯೊಂದು ಯೋಜನೆ ತಾರ್ಕಿಕವಾಗಿ ಧೃಡವಾಗಿರಬೇಕು. ಇಲ್ಲದಿದ್ದರೆ ಕ್ಲಾಸಿನ ಚರ್ಚೆಯಲ್ಲಿ ಇತರರು ಅದನ್ನು ಕೊಚ್ಚಿಹಾಕಿಬಿಡುತ್ತಾರೆ. ಪ್ರಾಧ್ಯಾಪಕರು ಜೀವಂತ ನುಂಗುತ್ತಾರೆ. ಮುಂದೆ ವೃತ್ತಿ ಜೀವನದಲ್ಲೂ ಅತಾರ್ಕಿಕವಾದ ವಾದಕ್ಕೆ ಯಾವುದೇ ಬೆಲೆ ಇರುವುದಿಲ್ಲ. ತರ್ಕಬದ್ಧವಾದ ಕಾರ್ಯಯೋಜನೆಯನ್ನು ಕಾರ್ಯರೂಪಕ್ಕೆ ತರುವುದೇ ಒಬ್ಬ ಪ್ರೊಫ಼ೆಶನಲ್ ಮ್ಯಾನೇಜರ್‌ನ ಕೆಲಸ. ಒಂದು ರೀತಿಯಲ್ಲಿ ಹೇಳುವುದಾದರೆ, ಕಾರ್ಪೋರೇಟ್ ಜಗತ್ತಿನಲ್ಲಿ ಲಾಜಿಕ್ ಅನ್ನು ದೇವರಂತೆ ಪೂಜಿಸಲಾಗುತ್ತದೆ.
ಮಹಾತ್ಮಾ ಗಾಂಧಿಯವರಷ್ಟು ಶ್ರೇಷ್ಠ ಮ್ಯಾನೇಜರನ್ನು ಅಥವಾ ನಾಯಕನನ್ನು ಈ ದೇಶ ಇದುವರೆಗೆ ಕಂಡಿಲ್ಲ. ಈ ಮಾತನ್ನು ಕಾರ್ಪೋರೇಟ್ ಜಗತ್ತು ಕೂಡಾ ಒಪ್ಪುತ್ತದೆ ಎಂದರೆ ಕೆಲವರಿಗೆ ಅಚ್ಚರಿಯಾಗಬಹುದು. ಒಂದು ದೇಶವನ್ನಾಗಲಿ, ಸಮಾಜವನ್ನಾಗಲಿ ಇಲ್ಲವೇ ಒಬ್ಬ ಅಂಬಾನಿಯ ರಿಲಯನ್ಸ್ ಸಾಮ್ರಾಜ್ಯವನ್ನಾಗಲಿ, ಕಟ್ಟುವುದು ಯಾವುದೇ ದಾರ್ಶನಿಕತೆ(ವಿಶನ್)ಯಿಲ್ಲದೆ ಅಸಾಧ್ಯ. ಒಬ್ಬ ಸಿ.ಇ.ಓ ರಾಷ್ಟ್ರಪಿತನಲ್ಲದಿದ್ದರೂ ಅತನಿಗೆ ತನ್ನದೇ ಪರಿಧಿಯಲ್ಲಿ ದಾರ್ಶನಿಕತೆ ಇರಲೇ ಬೇಕಾಗುತ್ತದೆ. ವಿಶ್ವದ ಆರ್ಥಿಕತೆ, ತನ್ನ ಉದ್ಯಮದ ಭವಿಷ್ಯ, ತಾನು ಎಲ್ಲಿದ್ದೇನೆ? ಎಲ್ಲಿ ಇರಬೇಕು? ಇತ್ಯಾದಿ ದೂರದರ್ಶಿತ್ವ ಇರದವ ಸಫ಼ಲನಾಗಲಾರನು. ಮಾರ್ಟಿನ್ ಲೂಥರ್ ಕಿಂಗ್ ಅಂದ ‘ ಐ ಹಾವ್ ಅ ಡ್ರೀಮ್. . .’ ಅದೇ ಆ ವಿಶನ್, ಒಬ್ಬ ಶ್ರೇಷ್ಠ ನಾಯಕನ ಮುಖ್ಯ ಗುಣ.

ಅಷ್ಟಾದರೆ ಸಾಕೇ? ಕನಸಿನ ಅರಮನೆ, ಕನಸಿನ ಸಾಮ್ರಾಜ್ಯ !! ಇಲ್ಲ. ಆ ಕನಸನ್ನು ಸಾಕಾರಗೊಳಿಸಲು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಈ ಹಂತ ಹಂತದ ಕಟ್ಟುವಿಕೆಯಲ್ಲಿ ಬೇಕಾದದ್ದು ಪರಿಶ್ರಮ. ಪರಿಶ್ರಮ ಅಂದರೆ ‘ಕತ್ತೆ ಕೆಲಸ’ವಲ್ಲ. ಅರ್ಜುನನ ಲಕ್ಷ್ಯದೊಡಗೂಡಿದ ಪರಿಶ್ರಮ. ಲೋಂಗ್ ಅವರ್ಸ್. ನೋ ಸ್ಲೀಪ್-ನೋ ಫ಼ುಡ್, ತಿಂಗಳಿಡೀ
ಟ್ರಾವೆಲ್. . . ಇದೆಲ್ಲವನ್ನೂ ಸಹಿಸಿಕೊಂಡು ಒಂದು ತಪಸ್ಸಿನಂತೆ, ಬಿಟ್ಟ ಬಾಣದಂತೆ ಮುನ್ನುಗ್ಗಬೇಕಾಗುತ್ತದೆ. ಯಾವುದೇ ಅಡ್ಡಿ, ಅಡೆತಡೆಗಳಿಂದ ಕುಗ್ಗದೆ ಛಲದಿಂದ ಕಾರ್ಯ ಸಾಧನೆ ಮಾಡುತ್ತಾ ಹೋಗಬೇಕಾಗುತ್ತದೆ.
ತಿಂಗಳು ತಿಂಗಳು ಹಾಕಿಕೊಂಡ ಮಾಸಿಕ ಟಾರ್ಗೆಟ್ಸ್ ಸಾಧಿಸಲೇ ಬೇಕು. ಇಲ್ಲ ಎಂಬ ಪ್ರಶ್ನೆಯೇ ಇಲ್ಲ. ಇದಕ್ಕೆ, ಲಕ್ಷ್ಯ, ಪರಿಶ್ರಮವಲ್ಲದೆ ಬಹಳಷ್ಟು ಶಿಸ್ತು ಕೂಡಾ ಬೇಕು. ಭಾರತದಲ್ಲಂತೂ ಫ಼ಾಲೋ-ಅಪ್ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ನಿಮ್ಮ ಟೇಬಲ್ ಮೇಲೆ ತೆರೆದಿಟ್ಟ ಡೈರಿಯಲ್ಲಿ ಹಾಕಿಕೊಂಡ ಯೋಜನೆಯನ್ನು ಎದುರಿಗೇ ತೂಗು ಹಾಕಿದ ಗಡಿಯಾರ ಸೂಚಿಸುವ ಸಮಯ ಸಮಯಕ್ಕೂ ಟ್ರಾಕ್ ಮಾಡುತ್ತಲೇ ಇರಬೇಕಾಗುತ್ತದೆ. ನಿಯತಕಾಲಿಕ ರಿವ್ಯೂ ಶಿಸ್ತು ಇಲ್ಲದೆ ಸಾಧ್ಯವಾಗಲಾರದು. ಯಾವ ಸಾಧನೆಯನ್ನೂ ಶಿಸ್ತು ಇಲ್ಲದೆ ಸಾಧಿಸಿದವರಿಲ್ಲ.
ಗಂಟೆಗmಲೆ ದೇವರ ಪೂಜೆ ಮಾಡಿಯೇ ಆಫ಼ೀಸಿಗೆ ಹೋಗುವ ಉದ್ಯೋಗಪತಿ ಇರಬಹುದು; ನಾಸ್ತಿಕ ಸಿ.ಇ.ಓ ಇರಬಹುದು. ಮಹಾಭಾರತ ಕಟ್ಟುಕತೆ ಎಂದು ಹೇಳುವವರಿರಬಹುದು. ಆದರೆ ‘ಕರ್ಮಣ್ಯೇವಾಧಿಕಾರಸ್ತೇ॒॒’ ಅನ್ನು ತಿಳಿದೋ ತಿಳಿಯದೆಯೋ ಆಚರಿಸದ ಸಿ.ಇ.ಓ ಇರಲಾರನು. ಯಾವುದೇ ಗೆಲುವು ಬರಲಿ, ಸೋಲು ಬರಲಿ ಹಿಗ್ಗದೆ-ಕುಗ್ಗದೆ, ಭಾವುಕನಾಗದೆ ಮುಂದೆ ಮಾಡಬೇಕಾಗಿರುವ ಕೆಲಸದ ಮೇಲೆ ಮಾತ್ರ ಫ಼ೋಕಸ್ ಇಟ್ಟುಕೊಂಡು ಕೂಲ್ ಆಗಿ ವ್ಯವಹರಿಸುತ್ತಾನೆ, ಒಬ್ಬ ಸಫ಼ಲ ಉದ್ಯೋಗಪತಿ. ಹೌದು. ಒಬ್ಬ ‘ಕೂಲ್ ಡ್ಯೂಡ್’ ಆಗಿರುವುದು ಅತೀ ಅಗತ್ಯ. ಭಾವುಕತೆ ಮತ್ತು ಬಿಸಿನೆಸ್ ಕೈ-ಕೈ ಹಿಡಿದು ಎಂದೂ ವಿಹರಿಸುವುದಿಲ್ಲ. ಸದಾ ಕೂಲ್ ಮತ್ತು ಕಂಪೋಸ್ಡ್ ಆಗಿ ಸದ್ಯದ ರಿಯಲ್ ಟೈಮ್‌ನಲ್ಲಿ ಜೀವಿಸುತ್ತಾನೆ ನಮ್ಮ ಸಿ.ಇ.ಓ. ಈ ಸಾಮರ್ಥ್ಯವನ್ನು ಯಾವ ಬಿಸಿನೆಸ್ ಶಾಲೆಯಲ್ಲೂ ಹೇಳಿಕೊಡಲಾಗುವುದಿಲ್ಲ. ಇದೂ ಒಂದು ಜೀನ್..
"ಮೊನ್ನೆ ಮೊನ್ನೆ ತಾನೆ ಕಂಪೆನಿ ಸೇರ್ಕೊಂಡ, ಮಾರಾಯ್ರೆ. ಆದ್ರೆ ಏನು ಸಕತ್ ಕಾಂಟಾಕ್ಟ್ ಬೆಳೆಸ್ಕೊಂಡ ಅಂದ್ರೆ. . . ಅಬ್ಬಬ್ಬ !! ಅವ್ನಿಗೆ ಗೊತ್ತಿಲ್ದೋರೇ ಇಲ್ಲ. ನಾವು ನಾಲಕ್ಕು ವರ್ಷಗಳಿಂದ ಮಣ್ಣು ಹೊರ್ತೀವಿ. ನಮ್ಗೂ ಅಷ್ಟು ಕಾಂಟಾಕ್ಟ್ ಇಲ್ಲ." - ಈ ಡೈಲಾಗ್ ಖಂಡಿತಾ ಕೇಳಿದ್ದೀವಿ ಅಲ್ವಾ? ಯಾವ ಕೆಲಸಾನೇ ಇರ್ಲಿ. ಕಂಪೆನಿಯ ಎಲ್ಲಾ ಮೂಲೆಗಳಲ್ಲೂ ಈ ಅಸಾಮಿಗೆ ಒಬ್ಬ ಕಾಂಟಾಕ್ಟ್ ಇರ್ತಾನೆ ಮತ್ತು ಅವನು ಬಂದು ಹೆಲ್ಪ್ ಮಾಡ್ತಾನೆ. ಅಲ್ಲದೆ, ಮೇಲಿನ ಎಲ್ಲಾ ಬಾಸ್‌ಗಳ ಪ್ರಿಯ ವ್ಯಕ್ತಿಯೂ ಆಗಿರ್ತಾನೆ. ಮೇಲ್ಗಡೆ ಹೋಗಿ ಯಾವ ಪೇಪರ್ಸ್ಗೆ ಬೇಕಾದ್ರೂ ಸೈನ್ ಹಾಕಿಸ್ಕೊಂಡು ಬರ್ತಾನೆ. ಆಗದಿದ್ದವರು ‘ಚಮಚಾಗಿರಿ’ ಎಂದು ಸುಲಭವಾಗಿ ಮೂಗು ಮುರಿಯಬಹುದಾದ ಈ ಗುಣ ಈಗ ಅಫ಼ೀಶಿಯಲ್! ಹೆಸರು ‘ನೆಟ್‌ವರ್ಕಿಂಗ್’.
‘ಬಿಸಿನೆಸ್ ಸೆನ್ಸ್’, . . . ಬಹಳ ಕೇಳಿದ್ದೇವೆ. ಏನಿದು ಬಿಸಿನೆಸ್ ಸೆನ್ಸ್? ಹಾಗೊಂದು ಇದೆಯಾ? ಹೀಗೊಬ್ಬ ಸಿ.ಇ.ಓ. . . ಮುಂಬಯಿನ ನಾರಿಮನ್ ಪಾಯಿಂಟ್‌ನ ಬಹುಮಾಳಿಗೆ ಕಟ್ಟಡಗಳಲ್ಲಿ ಒಂದಾದ ಮೇಕರ್ಸ್ ಚೇಂಬರ್ಸ್‌ನ ಯಾವುದೋ ಒಂದು ಎ.ಸಿ ಕೋಣೆಯಲ್ಲಿ ಕುಳಿತುಕೊಂಡು ಕಂಪೆನಿ ಮ್ಯಾನೇಜರ್‌ಗಳ ಪ್ರೆಸೆಂಟೇಶನ್ ಆಲಿಸುತ್ತಾ ಇರುತ್ತಾನೆ. ಅವರೆಲ್ಲಾ 500 ಕೋಟಿ ರೂಪಾಯಿಗಳ ಒಂದು ಹೊಸ ಹೂಡಿಕೆಯ ಪ್ರಸ್ತಾಪವನ್ನು ಹಾಡಿ ಹೊಗಳುತ್ತಾ ಇರುತ್ತಾರೆ. ಎಲ್ಲಾ ಪಾಸಿಟಿವ್, ನಷ್ಟದ ಪ್ರಶ್ನೆಯೇ ಇಲ್ಲ. ಎಲ್ಲಾ ವಾದ ಕೇಳಿ ಸಿ.ಇ.ಓ ‘ನೋ’ ಅಂತಾನೆ. ಹೆಚ್ಚಾಗಿ ಎ.ಸಿ ಕೋಣೆಯಲ್ಲೇ ಕಾಲ ಕಳೆಯುವ ಇವನು ದೇಶದ ಯಾವುದೋ ಒಂದು ಮೂಲೆಯಲ್ಲಾಗಲಿರುವ ಪ್ರಾಜೆಕ್ಟ್‌ನ ಬಗ್ಗೆ ‘ಫ಼ರ್ಗೆಟ್ ಇಟ್’ ಅಂತಾನೆ. ಇನ್ಯಾರಿಗೋ ‘ಗೋ ಅಹೆಡ್’ ಅಂತಾನೆ. ದಿನದ ಹೆಚ್ಚಿನ ಭಾಗ ‘ಯೆಸ್-ನೋ’ ಗಳಲ್ಲೇ ಈತನ ಸಮಯ ಕಳೆಯುತ್ತದೆ. ಈ ಯೆಸ್-ನೋ ಗಳಲ್ಲೇ ಒಂದೋ ಕಂಪೆನಿ ಮುಳುಗುತ್ತದೆ ಅಥವಾ ನೆಗೆಯುತ್ತದೆ. ಅದೇ ಆ ‘ಯೆಸ್-ನೋ’ ಗಳ ಮಹತ್ವ. ಈ ಯೆಸ್-ನೋ ಹೇಗೆ ನಿರ್ಧರಿಸುತ್ತಾನೆ ಅಂದರೆ ಅದಕ್ಕೆ ಉತ್ತರ. . .’ಅದು ಆತನ ಬಿಸಿನೆಸ್ ಸೆನ್ಸ್!’ ವಿವರಣೆಗೆ ನಿಲುಕುವುದು ಕಷ್ಟ. ಅಂತಹ ಬಿಸಿನೆಸ್ ಸೆನ್ಸ್‌ನಲ್ಲಿ ಎಲ್ಲಾದರು ಒಂದು ನೋಬೆಲ್ ಪ್ರೈಜ಼್ ಇದ್ದಿದ್ದರೆ ಅದು ಖಂಡಿತವಾಗಿ ಧೀರೂಭಾಯ್ ಅಂಬಾನಿಗೆ ಸಿಗುತ್ತಿತ್ತು.

ಮರೆಯಲುಂಟೇ ಲೀಡರ್ಶಿಪ್ ಗುಣವನ್ನ? ತಾನು ಕಂಡ ಕನಸನ್ನು ನನಸಾಗಿಸುವ ದಾರಿಯಲ್ಲಿ ಇಡೀ ಕಂಪೆನಿಯೇ ನಂಬಿಕೆಯಿರಿಸಿ ಹಿಂಬಾಲಿಸುವಂತಹ ಆ ಒಂದು ನಾಯಕತ್ವದ ಶಕ್ತಿ ಇಲ್ಲದಿದ್ದರೆ ಏನೂ ಆಗುವುದಿಲ್ಲ. ಕನಸು ಕಂಡವ ತನ್ನ ಕನಸುಗಾಡಿನಲ್ಲಿ ಒಬ್ಬಂಟಿಯಾಗಿ ಅಲೆಯಬೇಕಾಗುತ್ತದೆ. ನಾಯಕತ್ವ ಅನ್ನುವುದು ಕೂಡಾ ಸ್ಪಷ್ಟ ವಿವರಣೆಗೆ ನಿಲುಕದ ಪರಿಕಲ್ಪನೆ. ವಿವರಣೆ ಕಷ್ಟ, ಆದರೆ ನಮಗೆಲ್ಲಾ ಗೊತ್ತಿದೆ, ಅದು ಅಲ್ಲಿ ಇದೆ! ಇಟ್ ಈಸ್ ದೇರ್. . . !
ಈ ಎಲ್ಲಾ ಗುಣಲಕ್ಷಣಗಳೂ ಒಂದೇ ರೀತಿಯಾಗಿ ಎಲ್ಲಾ ಸಮಯ ಅಗತ್ಯ ಬೀಳುವುದಿಲ್ಲ. ಮ್ಯಾನೇಜ್ಮೆಂಟಿನ ಬೇರೆ ಬೇರೆ ಸ್ತರಗಳಲ್ಲಿ ಬೇರೆ ಬೇರೆ ಲಕ್ಷಣಗಳು ಅವಶ್ಯವಾಗುತ್ತವೆ. ಉದಾಹರಣೆಗಾಗಿ, ಕೆಳಗಿನ ಸ್ತರಗಳಲ್ಲಿ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ, ನಿರ್ವಹಿಸುವ ಗುಣಗಳು ಮುಖ್ಯವಾದರೆ ಕಾರ್ಪೋರೇಟ್ ಏಣಿಯಲ್ಲಿ ಮೇಲೇರಿದಂತೆಲ್ಲಾ ಬಿಸಿನೆಸ್ ಸೆನ್ಸ್,
ದೂರದರ್ಶಿತ್ವ, ನಾಯಕತ್ವ ಇತ್ಯಾದಿ ಗುಣಗಳು ಮುಖ್ಯವಾಗುತ್ತವೆ. ಈ ರೀತಿ ಕೆಲಸವನ್ನು ಹೊಂದಿಕೊಂಡು ಬೇರೆ ಬೇರೆ ಅಧಿಕಾರದ ಮಟ್ಟಗಳಲ್ಲಿ ಬೇರೆ ಬೇರೆ ಗುಣಲಕ್ಷಣಗಳು ಬೇರೆ ಬೇರೆ ಪ್ರಮಾಣದಲ್ಲಿ ಅಗತ್ಯ ಬೀಳುತ್ತದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ಼್ ಮ್ಯಾನೇಜ್ಮೆಂಟ್ ಆಗಲಿ, ಇತರ ಯಾವುದೇ ಪ್ರತಿಷ್ಠಿತ ಎಂ.ಬಿ.ಎ
ಕಲಿಸುವ ವಿಶ್ವವಿದ್ಯಾಲಯಗಳಾಗಲ್ಲಿ; ಸ್ವಲ್ಪಮಟ್ಟಿಗೆ ಲಾಜಿಕ್ ಒಂದು ಹೊರತುಪಡಿಸಿ, ಈ ಗುಣಗಳನ್ನು ಕಲಿಸುವುದೇ ಇಲ್ಲ. ಬದಲಾಗಿ, ಅಂತಹ ಗುಣಗಳು ಇರುವಂತಹ ವಿದ್ಯಾರ್ಥಿಗಳನ್ನೇ ಕೋರ್ಸಿಗೆ ಆಯ್ದುಕೊಳ್ಳುವ ಪ್ರಕ್ರಿಯೆಯನ್ನು ಪ್ರವೇಶ ಪರೀಕ್ಷೆಗಳ ಮೂಲಕ ನಡೆಸುತ್ತವೆ. ಅನಂತರ ಅಂತಹ ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಉದ್ಯಮ ನಿರ್ವಹಿಸಲು ಬೇಕಾದ ಫ಼ೈನಾನ್ಸ್, ಮಾರ್ಕೆಟಿಂಗ್ ಇತ್ಯಾದಿ ವಿಷಯಗಳ ಬಗೆಗಿನ ರೀತಿ ನೀತಿಗಳನ್ನೂ, ಸೂತ್ರ-ತಂತ್ರಗಳನ್ನೂ, ಟೂಲ್ಸ್ ಐನ್ಡ್ ಟೆಕ್ನಿಕ್ಸ್‌ಗಳನ್ನೂ ಡ್ರಿಲ್ ಮಾಡುತ್ತಾರೆ.
ಮೂಲಭೂತ ಬಿಸಿನೆಸ್ ಸಾಮರ್ಥ್ಯ ಹೊಂದಿದ, ಯಾವುದೇ ವಿಶೇಷ ಡಿಗ್ರಿಗಳಿಲ್ಲದ ಕರ್ಸನ್ ಭಾಯ್ ಪಟೇಲ್ ಗಳು, ಅಂಬಾನಿಗಳು, ಸಿಂಧಿ, ಗುಜರಾತಿ, ಮಾರ್ವಾಡಿಗಳು ಹೇಗೆ ಸಫಲರಾಗುತ್ತಾರೆ ಅಲ್ಲದೆ ಐ.ಐ.ಎಂ ನಂತಹ ಡಿಗ್ರಿ ಇದ್ದರೂ ಜೀವನಪರ್ಯಂತ ಮಧ್ಯಮ ಮಟ್ಟದ ಮ್ಯಾನೇಜ್ಮೆಂಟಿನ ಹುದ್ದೆಗಳಲ್ಲೇ ಕಾಲಕಳೆದು ಒಬ್ಬ ಉತ್ತಮ ಉದ್ಯಮಪತಿಯಾಗಲು ಹೇಗೆ ವಿಫಲರಾಗುತ್ತಾರೆ ಎಂಬುದನ್ನು ಇದರಿಂದ ನಾವು ಅರ್ಥೈಸಬಹುದು. ವ್ಯಕ್ತಿಗತವಾಗಿ ಇರುವ ‘ಗುಣಲಕ್ಷಣಗಳು’ ಮೂಲಭೂತವಾಗಿಯೂ, ಡಿಗ್ರಿದತ್ತವಾಗಿ ಬಂದ ‘ಟೂಲ್ಸ್ ಐನ್ಡ್ ಟೆಕ್ನಿಕ್ಸ್’ ಗಳು ಪೂರಕವಾಗಿಯೂ ಪಾತ್ರವಹಿಸುತ್ತವೆ.
ಇವೆರಡರ ಮಿಶ್ರಿತ ಅಂತಿಮ ಫಲವೇ ಒಬ್ಬ ಉದ್ಯಮಪತಿಯ ಸಫಲತೆಯನ್ನು ನಿರ್ಣಯಿಸುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಈ ಸತ್ಯವನ್ನು ಮನಗಂಡು ತಮ್ಮ ನೇಮಕಾತಿ, ತರಬೇತಿ ಮತ್ತು ‘ಎಪ್ರೈಸಲ್’ಗಳನ್ನು ಹೆಚ್ಚು ಹೆಚ್ಚು ‘ಮೂಲಭೂತ ಗುಣಲಕ್ಷಣ’ಗಳ ಮೇಲೆ ನಡೆಸತೊಡಗಿದ್ದಾರೆ. ಹೊಸ ನೇಮಕಾತಿಯ ಸಂದರ್ಭದಲ್ಲಿ ಅಂಕಗಳಿಗಿಂತ ಸಿ.ಇ.ಓ ಜೀನ್‌ಗಾಗಿ ಹುಡುಕಾಡುತ್ತಾರೆ. ಪರ್ಫ಼ೋರ್ಮನ್ಸ್ ಮೇಲೆ ಬಡ್ತಿ ಕೊಡುವುದು ಬಹುತೇಕ ನಿಂತೇ ಹೋಗಿದೆ. ಮೇಲಿನ ಹುದ್ದೆಗೆ ಬೇಕಾದ ‘ಗುಣಲಕ್ಷಣಗಳು’ ಇವೆಯೋ ಎಂದು ಮ್ಯಾಪ್ಪಿಂಗ್ ಮಾಡಿಯೇ ಬಡ್ತಿಯ ಬಗ್ಗೆ ನಿರ್ಧರಿಸುತ್ತಾರೆ. ಇದು ಕಾರ್ಪೋರೇಟ್ ಜಗತ್ತಿನ ಬಹಳ ಇತ್ತೀಚೆಗಿನ ಬೆಳವಣಿಗೆ.
ಈಗ ಮಿಲಿಯನ್ ಡಾಲರ್ ಪ್ರಶ್ನೆ: ‘ಇವೆಲ್ಲ ಹುಟ್ಟಿನಿಂದ ಮಾತ್ರವೇ ಬರುವಂತಹದ್ದಾ? ಅಲ್ಲ ಸಾಧನೆಯಿಂದ ಬೆಳೆಸಿಕೊಳ್ಳುವಂತಹದ್ದಾ?’ ಎರಡೂ ಹೌದು! ಬಹಳಷ್ಟು ಮಟ್ಟಿಗೆ ಇದು ಜನ್ಮಗತವಾಗಿ ಬರುವಂತಹ ಗುಣಲಕ್ಷಣಗಳೇ. ಆದರೂ ಸಾಕಷ್ಟು ಸಮಯ ವಿನಿಯೋಗಿಸಿದಲ್ಲಿ ಪ್ರಯತ್ನದಿಂದ, ಸಾಧನೆಯಿಂದ ಇವುಗಳ ಅಭಿವೃದ್ಧಿ ಖಂಡಿತಾ ಸಾಧ್ಯ. ಸಾಧನೆಯಿಂದ ಯಾವ ನಿಯಮವನ್ನು ಕೂಡಾ ಮೀರಿ ಬೆಳೆಯಬಹುದು. ಅಲ್ಲವೆ? ಆದರೆ, ಆದಷ್ಟು ಬೇಗ ಶುರು ಮಾಡಿದಷ್ಟು ಒಳ್ಳೆಯದು ಯಾಕೆಂದರೆ ಈ ಗುಣಗಳ ಬೆಳವಣಿಗೆಗೆ ಸಾಕಷ್ಟು ಸಮಯ ತಗಲುತ್ತದೆ.

No comments:

Post a Comment